ಶಿರ್ವ ಎಂಬುದು ಉಡುಪಿ ಸಮೀಪದ ಊರು. ಮಂಚಕಲ್ ಎಂದೂ ಈ ಊರಿಗೆ ಹೆಸರಿದೆಯಂತೆ. ಮಂಗಳೂರಿಂದ ಹೆಚ್ಚೂ ಕಡಿಮೆ ಒಂದು ಗಂಟೆ ಕಾಪುವಿಗೆ ಪ್ರಯಾಣ ಮಾಡಿ ಅಲ್ಲಿಂದ ಮತ್ತೊಂದು ಬಸ್ಸು ಹಿಡಿದು ಇಲ್ಲಿಗೆ ಬರಬೇಕು. ಮೊದ ಮೊದಲು ಈ ಊರಿಗೆ ಎರಡು ಹೆಸರು ಇರುವ ವಿಷಯ ತಿಳಿದಿರಲಿಲ್ಲ. ಶಿರ್ವ ಎಂಬುದು ಮಾತ್ರ ಎಂದು ನನ್ನ ಅರಿವಾಗಿತ್ತು. ಸಾರಿಗೆ ವಾಹನದಲ್ಲೆಲ್ಲಾ ಮಂಚಕಲ್ ಎಂದೇ ಬರೆದಿತ್ತಾದ್ದರಿಂದ ನಿಲ್ದಾಣದಲ್ಲಿ ಕಾದು, ಕಾದು ಬೆಪ್ಪನಾಗಿದ್ದೆ. ನಾನು ಈ ಊರಿಗೆ ಬಂದು ತಿಂಗಳೆರಡಾಯಿತು. ಶಿರ್ವ ಒಂದು ಸಣ್ಣ ಪೇಟೆ. ನಿತ್ಯೋಪಯೋಗಿ ಎಲ್ಲಾ ಸಾಮಾಗ್ರಿಗಳು, ಕೆಲವೊಮ್ಮೆ ಇನ್ನೂ ಅಧಿಕ ದೊರೆಯುವ, ಅಂದಾಜು ಜನಸಂದಣಿ ಇರುವ ಪೇಟೆ ಎಂದರೂ ತಪ್ಪಲ್ಲ. ಆದರೂ ಇಲ್ಲಿ ಎಂಟು ಬಾರ್(ಮಧ್ಯದಂಗಡಿ) ಇರುವ ವಿಷಯ ತಡವಾಗಿಯಾದರೂ ಅರಿವಿಗೆ ಬಂತು. ಬಹುಶಃ ಇಲ್ಲಿನ ಜನ ಮಧ್ಯ ಪ್ರಿಯರೋ ಏನೋ?(ಸರಿಯಾಗಿ ಇನ್ನೂ ಅನುಭವಕ್ಕೆ ಬಂದಿಲ್ಲ). ಪೇಟೆಯಿಂದ ಬಹುಸ್ವಲ್ಪ ದೂರದಲ್ಲಿರುವ ಪುರಾತನ ಬಾಡಿಗೆ ಮನೆಯೊಂದರಲ್ಲಿ ಎಂ.ಎಸ್.ಡಬ್ಲ್ಯು. ಉಪನ್ಯಾಸಕರಾದ ವಿಘ್ನೇಶ್ ಹೊಳ್ಳರೊಂದಿಗೆ ನನ್ನ ವಾಸ. ಮನೆ ಅಷ್ಟೊಂದು ಕೆಟ್ಟದಾಗಿಲ್ಲ ಬಿಡಿ. ಮನುಷ್ಯರ ಕಾಟವಿಲ್ಲದಿದ್ದರಿಂದಲೋ ಏನೋ ಇಲ್ಲಿ ಸೊಳ್ಳೆಗಳ ಕಾಟ ವಿಪರೀತ. ಪ್ರತೀನಿತ್ಯ ಒಂದರ್ಧ ಲೀಟರು ನನ್ನಿಂದ ನೆತ್ತರು ಬಲವಂತವಾಗಿ ಹೀರಿ ಪಡೆದು ಆರಾಮವಾಗಿವೆ ಅವು. ಬಾಡಿಗೆಯೂ ಕಡಿಮೆಯಾಗಿದ್ದರಿಂದ, ರಕ್ತದಾನ ಕಷ್ಟವಲ್ಲ. ಹಾಗೋ ಹೀಗೋ ಸೊಳ್ಳೆಗಳೊಂದಿಗೆ ಜೀವನ. ನನ್ನ ಸಹೋದ್ಯೋಗಿ ಮಿತ್ರರಾದ ಕನ್ನಡ ಮೇಷ್ಟ್ರು ದೊರಕಿಸಿ ಕೊಟ್ಟ ಮನೆ ಇದು.
ಮೊದಲೇ ಹೇಳಿದಂತೆ ಮನೆ ಅತ್ಯಂತ ಹಳೆಯದಾದ್ದರಿಂದ ಗೋಡೆಗಳೆಲ್ಲ ಮಣ್ಣಿನದು. ಸುತ್ತಲೂ ಬೆಲೆಬಾಳುವ ಮರಗಳ ಮುಚ್ಚಿಗೆ, ದಾರಂದ, ಕಿಟಕಿಗಳು. ಬೇಸಗೆ ಕಳೆಯಲು ಕರಾವಳಿಯಲ್ಲಿ ಹೇಳಿ ಮಾಡಿಸಿದಂತಿದೆ. ದಿನದ ಇಪ್ಪತ್ನಾಕು ಗಂಟೆಯೂ ವಿದ್ಯುದ್ದೀಪ ಉರಿಸುವ ಅನಿವಾರ್ಯತೆಯೂ ಇಲ್ಲದಿಲ್ಲ. ಆದರೂ ತಂಪಿನ ಕಗ್ಗತ್ತಲಲ್ಲಿ ಮಲಗಿ ನಿದ್ರಿಸಿದರೆ ಬೆಳಗಾದ ಗೊಡವೆಯೊಂದೂ ಇಲ್ಲದಾಗುತ್ತದೆ. ಮಣ್ಣಿನ ಗೆದ್ದಲು, ಇಲಿಗಳೂ ಇಲ್ಲಿನ ಅತಿಥಿಗಳು ಎಂದು ಚೂರು ತಡವಾಗಿ(ಹೇಗೆಂದು ಮುಂದೆ ಹೇಳುತ್ತೇನೆ) ನನ್ನರಿವಿಗೆ ಬಂತು. ಆದರೂ ಬಾವಿಯ ತಣ್ಣನೆಯ ಶುಭ್ರ ನೀರು ಕುಡಿದ ಮೇಲೆ ಇವ್ಯಾವು ದೊಡ್ಡ ಸಮಸ್ಯೆಯಾಗೆ ಗೋಚರಿಸಲಿಲ್ಲ.
ಹೀಗಿದ್ದ ಅದೊಂದು ದಿನ ಮುಂಜಾವು ೨ ಗಂಟೆಯಾಗಿದ್ದಿರಬಹುದು. ಮಿತ್ರ ಉಪನ್ಯಾಸಕರು ರಜೆಯ ಮೇಲಿದ್ದರು. ನಾನೊಬ್ಬನೆ ಕುಂಭಕರ್ಣ ನಿದ್ದೆಯಲ್ಲಿದ್ದೆ. ಧಿಡೀರನೆ ಅಡುಗೆ ಮನೆಯಲ್ಲಿ ಏನೋ ಸದ್ದು. ಎಚ್ಚರವಾದೆ. ಸದ್ದು ನಿಂತಿತು. ಪರಿಚಯವಿಲ್ಲದ ಊರು. ಮನೆ ಹಳೆಯದಾದರೂ ನನ್ನದು ಹೊಸ ವಾಸ್ತವ್ಯ. ಹಿಂಬಾಗಿಲು ಭದ್ರವಾಗಿ ಹಾಕಿದ್ದೆನೆಂದು ನೆನಪು. ಕಾರಣವೇನಿರಬಹುದು? ಭಾರಿ ಧೈರ್ಯಶಾಲಿಯಲ್ಲದಿದ್ದರೂ ಹೇಡಿಗಿಂತ ಚೂರು ಜಾಸ್ತಿ ಎನ್ನಲಡ್ಡಿಯಿಲ್ಲ. ಕಳ್ಳ-ಕಾಕರೇ ಅಥವಾ ಭೂತ-ಪ್ರೇತ ಚೇಷ್ಟೆಯೇ ಎಂಬ ಪ್ರಶ್ನೆ ಮನದಲ್ಲಿ ಹಾದು ಹೊಯಿತು. ಸಾಯಲಿ. ಮತ್ತೆ ಮುಸುಕು ಎಳೆದೆ. ಒಂದೆರಡು ನಿಮಿಶ ಮತ್ತದೇ ಸದ್ದು. ಕಣ್ಣು ಬಿಟ್ಟರೆ ಮೌನ. ಎದ್ದು ನೋಡಲೇ? ಅಧೈರ್ಯದೊಂದಿಗೆ ಉದಾಸೀನ. ಮತ್ತೆ ಮುಸುಕು. ಪುನಃ ಅದೇ ಸದ್ದು. ಕಿರಿ-ಕಿರಿಯಾಗತೊಡಗಿತು. ಹೇಗಿದ್ದರೂ ನಿದ್ದೆಯಿಲ್ಲ ನೋಡೆ ಬಿಡುತ್ತೇನೆಂದು ಎದ್ದು ಅಡುಗೆಮನೆಗೆ ನಡೆದೆ. ಟಾರ್ಚ್ ಬಿಟ್ಟರೆ ನೆಲದಲ್ಲಿ ಮೂಷಿಕವೊಂದು ದುರುಗುಟ್ಟಿ ನನ್ನನ್ನೇ ನೋಡುತ್ತಿತ್ತು. ಅಬ್ಬ..! ಬಚಾವ್..! ಇಲಿಯಾ..? ಏನೋ ಯೋಚಿಸಿ ನಡೆದಿದ್ದ ನನಗೆ ಸಮಾಧಾನ. ಇಲಿಯಲ್ಲವೇ, ಅದು ಏನು ಮಾಡಿಯಾತು? ಮನೆಯಲ್ಲಿದ್ದ ಅಳಿದುಳುದ ಧಾನ್ಯಗಳನ್ನು ತಿಂದೀತು. ತಿನ್ನಲಿ. ಬೆಲೆ ಏರಿಕೆಯ ಈ ಸಮಯದಲ್ಲಿ ಅದಕ್ಕಾದರು ಪುಕ್ಕಟೆ ಆಹಾರ ದೊರೆಯಲಿ. ಪದವಿಪೂರ್ವ ತರಗತಿಯಲ್ಲಿ ಮಾನ್ಯ ಲೇಖಕರಾದ ವೈಕಂ ಮಹಮ್ಮದ್ ಬಶೀರ್ ಬರೆದ ಲೇಖನವನ್ನು ಪಾಠವನ್ನಾಗಿ ಓದಿದ್ದೆ. Who is the real inheritor of earth? ಈ ಭೂಮಿಯ ಅಸಲಿ ಒಡೆಯನಾರು ಎಂಬುದು ಅವರ ಪ್ರಶ್ನೆಯಾಗಿತ್ತು. ಇಲ್ಲಿ ಬದುಕುವ ಹಕ್ಕು ಮನುಷ್ಯನಿಗೆಷ್ಟಿದೆಯೋ ಅಷ್ಟೇ ಅನ್ಯಜೀವಿಗಳಿಗೂ ಇದೆ ಎಂಬುದು ಅವರ ವಾದ. ಅದೊಮ್ಮೆ ಮನಸ್ಸಿಗೆ ಬಂತು ಅದರೊಂದಿಗೆ ದುರುಗುಟ್ಟಿ ನೋಡುತ್ತಿದ್ದ ಇಲಿಯ ಮೇಲೆ ಕರುಣೆಯೂ ಉಕ್ಕಿತು. ನಾನೂ ನೆರೆಮನೆಯವರೂ, ಎಲ್ಲರೂ ಓಡಿಸಿದರೆ ನೀ ಎಲ್ಲಿಗೆ ಹೋಗುವಿಯೋ ಮಹಾಶಯ? ಎಂದು ಕೊಳ್ಳುತ್ತಾ ಪುನಃ ಹಾಸಿಗೆ ಮೇಲೆ ಹಾರಿದೆ. ಸದ್ದು ಮುಂದುವರಿದಿತ್ತು. ಕರುಣೆ ಬಂದಿದ್ದರಿಂದಲೋ ಏನೊ ಕಿರಿಕಿರಿಯಾಗಲಿಲ್ಲ. ಹತ್ತು ನಿಮಿಷ ಕಳೆದಿರಬಹುದು, ಹಾಸಿಗೆಯ ಮೇಲೇನೋ ಹರಿದ ಅನುಭವ. ಏಳಲಿಲ್ಲ. ಹೌದು, ಏನೋ ಸರ್ರನೆ ಹರಿಯುತ್ತಿದೆ. ಹಾವಿರಬಹುದೇ..? ಇಲ್ಲ. ಏಳುವ ಮನಸ್ಸಾಯಿತಾದರು ಮತ್ತದೆ ಉದಾಸೀನ. ಈಗ ಮೈಮೇಲೆ ಸರಿದ ಅನುಮಾನ. ಇಲ್ಲ, ಮೈಮೇಲೆ ಹಾರಿ ಕುಪ್ಪಳಿಸಿದ ಅನುಭವ. ಹೌದು, ಮೂಷಿಕ ಮಹಾಶಯ ಈಗ ಸಲುಗೆ ಬೆಳೆದು ಮಲಗುವ ಕೋಣೆಗೂ ಕಾಟ ಶುರುವಿಟ್ಟಿದ್ದ. ಈ ಅನುಭವ ನಾಲ್ಕಾರು ಬಾರಿ ಆದ ಮೇಲೆ ಎದ್ದು ಕುಳಿತೆ. ಟಾರ್ಚ್ ಬಿಟ್ಟೆ, ನೋಡಿದರೆ ಹಾಸಿಗೆಯ ಎರಡೂ ಬದಿಯಲ್ಲಿ ಮೂಷಿಕ ದಂಪತಿಗಳು(ಇರಬಹುದು, ಗೊತ್ತಿಲ್ಲ). ಅದಾಗಲೇ ಕೋಪ ನೆತ್ತಿಗೇರಿತ್ತು. ನಿದ್ದೆ ಕೆಟ್ಟದ್ದು ಒಂದೆಡೆಯಾದರೆ ನನ್ನ ಕರುಣೆಯನ್ನೇ ಇವು ದೌರ್ಬಲ್ಯವೆಂದು ಭಾವಿಸಿದಂತಿದೆ. ಇಲ್ಲ ಇನ್ನು ಬಿಡಲಾಗದು. ಏನು ಮಾಡಲಿ ಎಂದಿರುವಾಗಲೇ ನೆಲ ಒರೆಸುವ ಉದ್ದನೆಯ ಸಾಧನವೊಂದು ಕಣ್ಣಿಗೆ ಬಿತ್ತು. ಎತ್ತಿದೆ. ಇಲಿಗಳಾಗಲೇ ಯುದ್ಧಕ್ಕೆ ಅಣಿಯಾದಂತಿತ್ತು, ಅವುಗಳ ನೋಟ ನನಗೆ ಮುಕ್ತ ಅಹ್ವಾನ ನೀಡುತ್ತಿತ್ತು. ಬಿಡಲಾರೆ ನಿಮ್ಮ..... ಎಂದು ಅಪ್ಪಳಿಸಿದೆ. ಅರೇ ಎಲ್ಲಿ..? ಕ್ಷಣಾರ್ಧದಲ್ಲಿ ಅವು ತಪ್ಪಿಸಿ ಮತ್ತೊಂದು ಮೂಲೆ ಸೇರಿ ಮತ್ತದೇ ದೃಷ್ಟಿಯ ಪಂಥಾಹ್ವಾನ. ಅಪ್ಪಳಿಸಿದರೆ, ಸರ್ರನೇ ತಪ್ಪಿಸಿ ಮೂಲೆ ಸೇರುತ್ತಿದ್ದವು. ಯುದ್ಧ ಸಮಯದ ಗೊಡವೆಯೇ ಇಲ್ಲದೆ ಮುಂದುವರಿದಿತ್ತು. ಫ್ಯಾನಿನ ನಡುವೆಯೂ ಮೈಯಲ್ಲಿ ಬೆವರು ಧಾರಾಕಾರವಾಗಿ ಸುರಿಯುತ್ತಿತ್ತು. ಸೋಲೊಪ್ಪಿಕೊಳ್ಳಲು ಮನ ಸಿದ್ದವಿಲ್ಲ. ಕೈಯಲ್ಲಿದ್ದ ದೊಣ್ಣೆ(ನೆಲ ಒರೆಸುವ) ತುಂಡಾಗಿತ್ತು. ತುಂಡರ್ಧದಲ್ಲೇ ಮುಂದುವರೆಸಿದೆ. ಎರಡು ವೈರಿಗಳು, ನಾನೂ ನನ್ನ ಕೋಲೂ. ಅಟ್ಟಾಡಿಸಿದೆ. ಮೂಷಿಕವೊಂದು ಅಚಾನಕ್ಕಾಗಿ ಕೋಣೆಯ ನಡುಭಾಗಕ್ಕೆ ಬಂತು. ಅತ್ತಲೋ ಇತ್ತಲೋ ಎಂದು ಯೋಚಿಸುತ್ತಿರುವಾಗಲೇ ಕೈಯ್ಯ ಕೋಲು ಪ್ರಹಾರ ಮಾಡಿಯಾಗಿತ್ತು. ಗೆದ್ದೆ...! ವೈರಿಯೊಂದು ಸತ್ತಿತು ಎಂಬ ಭಾವ ಇನ್ನೊಂದನ್ನು ಹೊರಹೋಗಬಿಟ್ಟಿತು. ಬಾಲ ಹಿಡಿದು ಮೇಲಕ್ಕೆತ್ತಿದೆ. ಪಾರ್ಥನ ಸೋಲಿಸಿದ ಬಭ್ರುವಾಹನನಂತೆ ಗಾಂಭೀರ್ಯದಿಂದ ಹೊರನಡೆದೆ. ಹಿತ್ತಲ ತೋಟಕ್ಕೆ ಎಸೆದೆ.
ಕಣ್ಣು ಇನ್ನೊಂದನ್ನು ಹುಡುಕಿತಾದರೂ ಅದು ಗೋಚರಿಸಲಿಲ್ಲ. ಮಾಡಿದ್ದು ಪಾಪಕೃತ್ಯವಾಗಿದ್ದರೂ ಧೀರ್ಘ ಯುದ್ಧದ ಜಯದಿಂದ ನಿಟ್ಟುಸಿರು ಬಿಟ್ಟೆ. ಹಾಸಿಗೆ ಚೆಲ್ಲಾಪಿಲ್ಲಿಯಾಗಿತ್ತು. ಕೈಯಲ್ಲಿದ್ದ ಒರೆಸುವ ಕೋಲನ್ನು ಮೂಲೆಗೆ ಎಸೆದೆ. Rs 225 ಎಂದು ಅದರ ಮೇಲೆ ಬರೆದ ಕಾಗದದ ತುಂಡೊಂದು ಈಗ ಸರಿಯಾಗಿ ಕಣ್ಣಿಗೆ ಬಿತ್ತು. ಹಾಸಿಗೆ ಎಳೆದು ಉರುಳಿ ಗಡಿಯಾರ ನೋಡಿದರೆ ಜಾವ ಐದೂವರೆ. ಶಿವಾ....!! ಈ ಶಿರ್ವದಲ್ಲಿ ಮತ್ತೆಂದೂ ಮೂಶಿಕನ ಕಳಿಸಬೇಡಪ್ಪಾ ಎಂದು ಮತ್ತೆ ಮುಸುಕು ಎಳೆದೆ.
ಮೊದಲೇ ಹೇಳಿದಂತೆ ಮನೆ ಅತ್ಯಂತ ಹಳೆಯದಾದ್ದರಿಂದ ಗೋಡೆಗಳೆಲ್ಲ ಮಣ್ಣಿನದು. ಸುತ್ತಲೂ ಬೆಲೆಬಾಳುವ ಮರಗಳ ಮುಚ್ಚಿಗೆ, ದಾರಂದ, ಕಿಟಕಿಗಳು. ಬೇಸಗೆ ಕಳೆಯಲು ಕರಾವಳಿಯಲ್ಲಿ ಹೇಳಿ ಮಾಡಿಸಿದಂತಿದೆ. ದಿನದ ಇಪ್ಪತ್ನಾಕು ಗಂಟೆಯೂ ವಿದ್ಯುದ್ದೀಪ ಉರಿಸುವ ಅನಿವಾರ್ಯತೆಯೂ ಇಲ್ಲದಿಲ್ಲ. ಆದರೂ ತಂಪಿನ ಕಗ್ಗತ್ತಲಲ್ಲಿ ಮಲಗಿ ನಿದ್ರಿಸಿದರೆ ಬೆಳಗಾದ ಗೊಡವೆಯೊಂದೂ ಇಲ್ಲದಾಗುತ್ತದೆ. ಮಣ್ಣಿನ ಗೆದ್ದಲು, ಇಲಿಗಳೂ ಇಲ್ಲಿನ ಅತಿಥಿಗಳು ಎಂದು ಚೂರು ತಡವಾಗಿ(ಹೇಗೆಂದು ಮುಂದೆ ಹೇಳುತ್ತೇನೆ) ನನ್ನರಿವಿಗೆ ಬಂತು. ಆದರೂ ಬಾವಿಯ ತಣ್ಣನೆಯ ಶುಭ್ರ ನೀರು ಕುಡಿದ ಮೇಲೆ ಇವ್ಯಾವು ದೊಡ್ಡ ಸಮಸ್ಯೆಯಾಗೆ ಗೋಚರಿಸಲಿಲ್ಲ.
ಹೀಗಿದ್ದ ಅದೊಂದು ದಿನ ಮುಂಜಾವು ೨ ಗಂಟೆಯಾಗಿದ್ದಿರಬಹುದು. ಮಿತ್ರ ಉಪನ್ಯಾಸಕರು ರಜೆಯ ಮೇಲಿದ್ದರು. ನಾನೊಬ್ಬನೆ ಕುಂಭಕರ್ಣ ನಿದ್ದೆಯಲ್ಲಿದ್ದೆ. ಧಿಡೀರನೆ ಅಡುಗೆ ಮನೆಯಲ್ಲಿ ಏನೋ ಸದ್ದು. ಎಚ್ಚರವಾದೆ. ಸದ್ದು ನಿಂತಿತು. ಪರಿಚಯವಿಲ್ಲದ ಊರು. ಮನೆ ಹಳೆಯದಾದರೂ ನನ್ನದು ಹೊಸ ವಾಸ್ತವ್ಯ. ಹಿಂಬಾಗಿಲು ಭದ್ರವಾಗಿ ಹಾಕಿದ್ದೆನೆಂದು ನೆನಪು. ಕಾರಣವೇನಿರಬಹುದು? ಭಾರಿ ಧೈರ್ಯಶಾಲಿಯಲ್ಲದಿದ್ದರೂ ಹೇಡಿಗಿಂತ ಚೂರು ಜಾಸ್ತಿ ಎನ್ನಲಡ್ಡಿಯಿಲ್ಲ. ಕಳ್ಳ-ಕಾಕರೇ ಅಥವಾ ಭೂತ-ಪ್ರೇತ ಚೇಷ್ಟೆಯೇ ಎಂಬ ಪ್ರಶ್ನೆ ಮನದಲ್ಲಿ ಹಾದು ಹೊಯಿತು. ಸಾಯಲಿ. ಮತ್ತೆ ಮುಸುಕು ಎಳೆದೆ. ಒಂದೆರಡು ನಿಮಿಶ ಮತ್ತದೇ ಸದ್ದು. ಕಣ್ಣು ಬಿಟ್ಟರೆ ಮೌನ. ಎದ್ದು ನೋಡಲೇ? ಅಧೈರ್ಯದೊಂದಿಗೆ ಉದಾಸೀನ. ಮತ್ತೆ ಮುಸುಕು. ಪುನಃ ಅದೇ ಸದ್ದು. ಕಿರಿ-ಕಿರಿಯಾಗತೊಡಗಿತು. ಹೇಗಿದ್ದರೂ ನಿದ್ದೆಯಿಲ್ಲ ನೋಡೆ ಬಿಡುತ್ತೇನೆಂದು ಎದ್ದು ಅಡುಗೆಮನೆಗೆ ನಡೆದೆ. ಟಾರ್ಚ್ ಬಿಟ್ಟರೆ ನೆಲದಲ್ಲಿ ಮೂಷಿಕವೊಂದು ದುರುಗುಟ್ಟಿ ನನ್ನನ್ನೇ ನೋಡುತ್ತಿತ್ತು. ಅಬ್ಬ..! ಬಚಾವ್..! ಇಲಿಯಾ..? ಏನೋ ಯೋಚಿಸಿ ನಡೆದಿದ್ದ ನನಗೆ ಸಮಾಧಾನ. ಇಲಿಯಲ್ಲವೇ, ಅದು ಏನು ಮಾಡಿಯಾತು? ಮನೆಯಲ್ಲಿದ್ದ ಅಳಿದುಳುದ ಧಾನ್ಯಗಳನ್ನು ತಿಂದೀತು. ತಿನ್ನಲಿ. ಬೆಲೆ ಏರಿಕೆಯ ಈ ಸಮಯದಲ್ಲಿ ಅದಕ್ಕಾದರು ಪುಕ್ಕಟೆ ಆಹಾರ ದೊರೆಯಲಿ. ಪದವಿಪೂರ್ವ ತರಗತಿಯಲ್ಲಿ ಮಾನ್ಯ ಲೇಖಕರಾದ ವೈಕಂ ಮಹಮ್ಮದ್ ಬಶೀರ್ ಬರೆದ ಲೇಖನವನ್ನು ಪಾಠವನ್ನಾಗಿ ಓದಿದ್ದೆ. Who is the real inheritor of earth? ಈ ಭೂಮಿಯ ಅಸಲಿ ಒಡೆಯನಾರು ಎಂಬುದು ಅವರ ಪ್ರಶ್ನೆಯಾಗಿತ್ತು. ಇಲ್ಲಿ ಬದುಕುವ ಹಕ್ಕು ಮನುಷ್ಯನಿಗೆಷ್ಟಿದೆಯೋ ಅಷ್ಟೇ ಅನ್ಯಜೀವಿಗಳಿಗೂ ಇದೆ ಎಂಬುದು ಅವರ ವಾದ. ಅದೊಮ್ಮೆ ಮನಸ್ಸಿಗೆ ಬಂತು ಅದರೊಂದಿಗೆ ದುರುಗುಟ್ಟಿ ನೋಡುತ್ತಿದ್ದ ಇಲಿಯ ಮೇಲೆ ಕರುಣೆಯೂ ಉಕ್ಕಿತು. ನಾನೂ ನೆರೆಮನೆಯವರೂ, ಎಲ್ಲರೂ ಓಡಿಸಿದರೆ ನೀ ಎಲ್ಲಿಗೆ ಹೋಗುವಿಯೋ ಮಹಾಶಯ? ಎಂದು ಕೊಳ್ಳುತ್ತಾ ಪುನಃ ಹಾಸಿಗೆ ಮೇಲೆ ಹಾರಿದೆ. ಸದ್ದು ಮುಂದುವರಿದಿತ್ತು. ಕರುಣೆ ಬಂದಿದ್ದರಿಂದಲೋ ಏನೊ ಕಿರಿಕಿರಿಯಾಗಲಿಲ್ಲ. ಹತ್ತು ನಿಮಿಷ ಕಳೆದಿರಬಹುದು, ಹಾಸಿಗೆಯ ಮೇಲೇನೋ ಹರಿದ ಅನುಭವ. ಏಳಲಿಲ್ಲ. ಹೌದು, ಏನೋ ಸರ್ರನೆ ಹರಿಯುತ್ತಿದೆ. ಹಾವಿರಬಹುದೇ..? ಇಲ್ಲ. ಏಳುವ ಮನಸ್ಸಾಯಿತಾದರು ಮತ್ತದೆ ಉದಾಸೀನ. ಈಗ ಮೈಮೇಲೆ ಸರಿದ ಅನುಮಾನ. ಇಲ್ಲ, ಮೈಮೇಲೆ ಹಾರಿ ಕುಪ್ಪಳಿಸಿದ ಅನುಭವ. ಹೌದು, ಮೂಷಿಕ ಮಹಾಶಯ ಈಗ ಸಲುಗೆ ಬೆಳೆದು ಮಲಗುವ ಕೋಣೆಗೂ ಕಾಟ ಶುರುವಿಟ್ಟಿದ್ದ. ಈ ಅನುಭವ ನಾಲ್ಕಾರು ಬಾರಿ ಆದ ಮೇಲೆ ಎದ್ದು ಕುಳಿತೆ. ಟಾರ್ಚ್ ಬಿಟ್ಟೆ, ನೋಡಿದರೆ ಹಾಸಿಗೆಯ ಎರಡೂ ಬದಿಯಲ್ಲಿ ಮೂಷಿಕ ದಂಪತಿಗಳು(ಇರಬಹುದು, ಗೊತ್ತಿಲ್ಲ). ಅದಾಗಲೇ ಕೋಪ ನೆತ್ತಿಗೇರಿತ್ತು. ನಿದ್ದೆ ಕೆಟ್ಟದ್ದು ಒಂದೆಡೆಯಾದರೆ ನನ್ನ ಕರುಣೆಯನ್ನೇ ಇವು ದೌರ್ಬಲ್ಯವೆಂದು ಭಾವಿಸಿದಂತಿದೆ. ಇಲ್ಲ ಇನ್ನು ಬಿಡಲಾಗದು. ಏನು ಮಾಡಲಿ ಎಂದಿರುವಾಗಲೇ ನೆಲ ಒರೆಸುವ ಉದ್ದನೆಯ ಸಾಧನವೊಂದು ಕಣ್ಣಿಗೆ ಬಿತ್ತು. ಎತ್ತಿದೆ. ಇಲಿಗಳಾಗಲೇ ಯುದ್ಧಕ್ಕೆ ಅಣಿಯಾದಂತಿತ್ತು, ಅವುಗಳ ನೋಟ ನನಗೆ ಮುಕ್ತ ಅಹ್ವಾನ ನೀಡುತ್ತಿತ್ತು. ಬಿಡಲಾರೆ ನಿಮ್ಮ..... ಎಂದು ಅಪ್ಪಳಿಸಿದೆ. ಅರೇ ಎಲ್ಲಿ..? ಕ್ಷಣಾರ್ಧದಲ್ಲಿ ಅವು ತಪ್ಪಿಸಿ ಮತ್ತೊಂದು ಮೂಲೆ ಸೇರಿ ಮತ್ತದೇ ದೃಷ್ಟಿಯ ಪಂಥಾಹ್ವಾನ. ಅಪ್ಪಳಿಸಿದರೆ, ಸರ್ರನೇ ತಪ್ಪಿಸಿ ಮೂಲೆ ಸೇರುತ್ತಿದ್ದವು. ಯುದ್ಧ ಸಮಯದ ಗೊಡವೆಯೇ ಇಲ್ಲದೆ ಮುಂದುವರಿದಿತ್ತು. ಫ್ಯಾನಿನ ನಡುವೆಯೂ ಮೈಯಲ್ಲಿ ಬೆವರು ಧಾರಾಕಾರವಾಗಿ ಸುರಿಯುತ್ತಿತ್ತು. ಸೋಲೊಪ್ಪಿಕೊಳ್ಳಲು ಮನ ಸಿದ್ದವಿಲ್ಲ. ಕೈಯಲ್ಲಿದ್ದ ದೊಣ್ಣೆ(ನೆಲ ಒರೆಸುವ) ತುಂಡಾಗಿತ್ತು. ತುಂಡರ್ಧದಲ್ಲೇ ಮುಂದುವರೆಸಿದೆ. ಎರಡು ವೈರಿಗಳು, ನಾನೂ ನನ್ನ ಕೋಲೂ. ಅಟ್ಟಾಡಿಸಿದೆ. ಮೂಷಿಕವೊಂದು ಅಚಾನಕ್ಕಾಗಿ ಕೋಣೆಯ ನಡುಭಾಗಕ್ಕೆ ಬಂತು. ಅತ್ತಲೋ ಇತ್ತಲೋ ಎಂದು ಯೋಚಿಸುತ್ತಿರುವಾಗಲೇ ಕೈಯ್ಯ ಕೋಲು ಪ್ರಹಾರ ಮಾಡಿಯಾಗಿತ್ತು. ಗೆದ್ದೆ...! ವೈರಿಯೊಂದು ಸತ್ತಿತು ಎಂಬ ಭಾವ ಇನ್ನೊಂದನ್ನು ಹೊರಹೋಗಬಿಟ್ಟಿತು. ಬಾಲ ಹಿಡಿದು ಮೇಲಕ್ಕೆತ್ತಿದೆ. ಪಾರ್ಥನ ಸೋಲಿಸಿದ ಬಭ್ರುವಾಹನನಂತೆ ಗಾಂಭೀರ್ಯದಿಂದ ಹೊರನಡೆದೆ. ಹಿತ್ತಲ ತೋಟಕ್ಕೆ ಎಸೆದೆ.
ಕಣ್ಣು ಇನ್ನೊಂದನ್ನು ಹುಡುಕಿತಾದರೂ ಅದು ಗೋಚರಿಸಲಿಲ್ಲ. ಮಾಡಿದ್ದು ಪಾಪಕೃತ್ಯವಾಗಿದ್ದರೂ ಧೀರ್ಘ ಯುದ್ಧದ ಜಯದಿಂದ ನಿಟ್ಟುಸಿರು ಬಿಟ್ಟೆ. ಹಾಸಿಗೆ ಚೆಲ್ಲಾಪಿಲ್ಲಿಯಾಗಿತ್ತು. ಕೈಯಲ್ಲಿದ್ದ ಒರೆಸುವ ಕೋಲನ್ನು ಮೂಲೆಗೆ ಎಸೆದೆ. Rs 225 ಎಂದು ಅದರ ಮೇಲೆ ಬರೆದ ಕಾಗದದ ತುಂಡೊಂದು ಈಗ ಸರಿಯಾಗಿ ಕಣ್ಣಿಗೆ ಬಿತ್ತು. ಹಾಸಿಗೆ ಎಳೆದು ಉರುಳಿ ಗಡಿಯಾರ ನೋಡಿದರೆ ಜಾವ ಐದೂವರೆ. ಶಿವಾ....!! ಈ ಶಿರ್ವದಲ್ಲಿ ಮತ್ತೆಂದೂ ಮೂಶಿಕನ ಕಳಿಸಬೇಡಪ್ಪಾ ಎಂದು ಮತ್ತೆ ಮುಸುಕು ಎಳೆದೆ.