Monday, March 26, 2012

     ಡಾನ್ ನ ರೋಮನಂತೆ
ಜಂಗ್ಲಿ ಬಿಲ್ಲಿ ಅವಳಲ್ಲ. ರಾಜ್ ನ ಸನ್ನಿರೀಟ ಸಿಮ್ರಾನ್ ನಂತೆ ಮುಗ್ಧಳೂ ಅವಳಲ್ಲ.
ಜಾಕ್ ನ ರೋಸ್ ನಂತೆ ಅಪ್ರತಿಮ ಸುಂದರಿಯೂ ಅವಳಲ್ಲ. ನಿನ್ನಿಂದಲೇ ನಿನ್ನಿಂದಲೇ,, ಎಂದು ಅವಳೊಂದಿಗೆ ನಾನು ಯಾವತ್ತೂ ಪ್ರಣಯ ಗೀತೆ ಹಾಡಿಲ್ಲ. ಯಾವುದೋ ಕಾಡಿನೊಳಗೆ ಕ್ರೂರ ಮೃಗಗಳಿಂದ ಅವಳನ್ನು ರಕ್ಷಿಸಿ ಅವಳೊಂದಿಗೆ ಪಕ್ಕಾ ಶ್ರೀರಾಮನಂತೆ ರಾತ್ರಿಯನ್ನೂ ಕಳೆದಿಲ್ಲ.
   ಇಂತಿದ್ದರೂ ಅವಳೊಂದು ದಿನ ನನಗೆ ಪರಿಚಯವಾದಳು. ನನ್ನ ಜೀವನದ ಆರಂಭವೇನೋ ಎಂಬಂತೆ ನನಗಾಗ ಭಾಸವಾಯಿತು. ಅವಳ ಸೌಂದರ್ಯ ವರ್ಣನಾತೀತವೇನು ಅಲ್ಲ ಎಂದು ನನಗಾವತ್ತೂ ಅನಿಸಿಲ್ಲ. ಯಾಕೆಂದರೆ ಅವಳನ್ನು ವರ್ಣಿಸಲು ನನ್ನಿಂದ ಅಸಾಧ್ಯ. ಪ್ರೇಮ ಕುರುಡು ಅಂತಿದ್ದ ನಾನು ಅವಳ ಕಂಡ ಮೇಲೆ ಕಣ್ಣು ರೆಪ್ಪೆ ಮುಚ್ಚಿಲ್ಲ. ಹುಡುಗಿಯನ್ನು ಹೆಂಡಕ್ಕೂ ಪ್ರೀತಿಯನ್ನು ನಶೆಗೂ ಹೋಲಿಸುವವರಿದ್ದಾರೆ. ನನಗವಳು ನಶೆ ಏರಿಸಿಲ್ಲ. ಬದಲಾಗಿ ಇಹದ ಗೊಡವೆಯನ್ನು ಮತ್ತಷ್ಟು ಹೆಚ್ಚಿಸಿದ್ದಾಳೆ. ಜೀವಕ್ಕೆ ಬಲ ತುಂಬಿ ಜೀವನದ ಆಸೆಗೆ ಕಿಚ್ಚು ಹೊತ್ತಿಸಿದ್ದಾಳೆ.
      ನಾನವಳಿಗೆ ದಿನಕ್ಕೆ ಆರು ಬಾರಿ ಫೋನ್ ಮಾಡುವುದಿಲ್ಲ. ಇಪ್ಪತ್ನಾಕು ಗಂಟೆ ಮೆಸೇಜ್ ಕಳಿಸುವುದಿಲ್ಲ, ವಾರಕ್ಕೆ ಮೂರು ಬಾರಿ ಪಾರ್ಕು,ಥಿಯೇಟರ್ ಎಂದು ಸುತ್ತುವುದೂ ಇಲ್ಲ,  ಅವಳಿಗದು ಇಷ್ಟವೂ ಇಲ್ಲ.ಆದರು ಅವಳು ನನ್ನ ಹೃದಯದಲ್ಲಿ ನೆಲೆಸಿದ್ದಾಳೆ. ಅವಳನ್ನು ನೆನೆಸದ ಕ್ಷಣದಲ್ಲೇ ಎದೆ ಬಡಿತ ಕೂಡ ನಿಲ್ಲುತ್ತದೆ ಎಂಬ ಅರಿವು ನನಗಿದೆ. ಪ್ರೀತಿಯಲ್ಲಿ ಏನೇನೋ ಕಳೆದುಕೊಂಡವರು ಇದ್ದಾರಂತೆ. ಆದರೆ ನನ್ನ ಪ್ರಕಾರ ಪ್ರೀತಿಯಿಂದ ನಾವು ಎಲ್ಲವನ್ನು ಗಳಿಸಿಕೊಳ್ಳುತ್ತೇವೆ. ಇಲ್ಲಿ ಪ್ರತಿಯೊಂದೂ ಆನಂದವನ್ನೇ ನೀಡುತ್ತದೆ.
     ಅವಳೊಂದು ಮರೆಯಲಾಗದ ಕವಿತೆ. ಪ್ರತಿ ಬಾರಿ ಓದಿದಾಗಲೂ ಮನ ಮತ್ತಷ್ಟು ಉಲ್ಲಾಸ, ಉತ್ಸಾಹಗೊಳ್ಳುತ್ತದೆ. ಜೀವನ ಹೀಗೂ ಉಂಟೆ ಎಂದು ನನಗರಿವಾದದ್ದು ಅವಳಿಂದಲೇ. ನನ್ನ ಪ್ರತಿ ಸಮಸ್ಯೆಗೂ ಅವಳೇ ಪರಿಹಾರ. ನನ್ನ ಜೀವಕ್ಕೆ ಅವಳೇ ಆಧಾರ. ಮಂತ್ರ ಮುಗ್ಧನಾಗಿ ಅವಳ ಮಾತುಗಳನ್ನು ಕೇಳುವಾಗ ಸರಣಿ ಬಾಂಬ್ ಸ್ಪೋಟಿಸಿದರೂ ನನಗೆ ಬಹುಶಃ ಗೊತ್ತಾಗಲಾರದು. ಭಾರಿ ಧೈರ್ಯವಂತೆಯೇನು ಅವಳಲ್ಲ. ಹೇಡಿಯೂ ಅವಳಲ್ಲ, ನನ್ನಂತೆಯೇ ಅವಳೂ ಒಬ್ಬ ದೇಶಪ್ರೇಮಿ. ನಾವಿಬ್ಬರೂ ಮಾತಾಡುವಾಗ ಹೆಚ್ಚಿನ ವಿಶಯ ದೇಶದ್ದೇ ಆಗಿರುತ್ತದೆ. ಸಾಯುವುದಾದರೆ ದೇಶಕ್ಕಾಗಿ ಆಗಿರಬೇಕು ಎಂದು ಅವಳ್ಯಾವತ್ತೂ ಹೇಳುತ್ತಾಳೆ. ನೀನು ಭಾರತೀಯ ಎಂದು ಹೆಮ್ಮೆ ಪಡು ಜೊತೆಗೆ ನಿನ್ನನ್ನು ಹಡೆದ ಭಾರತಾಂಬೆಯೂ ನಿನ್ನ ಬಗ್ಗೆ ಹೆಮ್ಮೆ ಪಡುವಂತೆ ಮಾಡು. ಎನ್ನುವುದು ಅವಳ ಮನದಾಳದ ನುಡಿ.
   ಅವಳ ವಿಶೇಷತೆ ಎನೆಂದರೆ ಅವಳಿಗೆ ಜೀವನದಲ್ಲಿ ಇರುವ ಸಮಸ್ಯೆ ಎಲ್ಲ ಪರರದ್ದೇ, ರಾಜಕೀಯ ಸೇರು ಎಂದು ನಾನವಳನ್ನು ರೇಗಿಸಿದ್ದುಂಟು. ಈಗಿನ ಯುವಕ/ತಿ ಯರಂತೆ ಅವಳು ರಾಜಕೀಯವನ್ನು ದೂರುವುದಿಲ್ಲ, ನಾವದನ್ನು ಬದಲಿಸೋಣ ಎಂಬುದು ಅವಳ ನಿಲುವು.ಅದಕ್ಕಾಗಿ ನನ್ನನ್ನವಳು ಹುರಿದುಂಬಿಸುತ್ತಾಳೆ. ಅವಳ ಯಾವ ಗುಣವನ್ನು ನಾನು ಅತಿ ಹೆಚ್ಚು ಇಷ್ಟಪಡುತ್ತೇನೋ ಗೊತ್ತಿಲ್ಲ ಒಂದಂತೂ ನಿಜ ಅವಳೊಂದಿಗೆ ನಾನು ಇಡೀ ಜಗತ್ತನ್ನೇ ಇಷ್ಟಪಡುತ್ತೇನೆ.ಅವಳು ಹೇಳುವ ಅನೇಕ ವಿಶಯಗಳು ತತ್ವವಾದಗಳಾಗಿದ್ದರೂ ನಾನದನ್ನು ಆನಂದಿಸುತ್ತೇನೆ,ಅನುಸರಿಸಲು ಬಯಸುತ್ತೇನೆ. ಆ ಜ್ವಾಲೆಯನ್ನು ಅವಳು ನನ್ನಲ್ಲಿ ತುಂಬಿದ್ದಾಳೆ. ಅವಳೊಬ್ಬ ತತ್ವಜ್ನಾನಿ ಎಂದು ಕರೆದರೂ ತಪ್ಪಾಗಲಾರದು, ಇಹ ಮತ್ತು ಪರದ ವ್ಯತ್ಯಾಸವನ್ನು ವ್ಯಾಖ್ಯಾನಿಸಿ ಅದರ ಮಹತ್ವವನ್ನು ನನ್ನೊಳಗೆ ತುಂಬಲು ಯತ್ನಿಸಿದಳು. ಇಹದಲ್ಲಿದ್ದುಕೊಂಡು ನಾನು ಮಾಡಬೇಕಾದ ಕರ್ತವ್ಯಗಳನ್ನು ನನಗವಳು ಭೋದಿಸಿದಳು.
   ಅವಳಲ್ಲೊಂದು ವಿವೇಕಾನಂದ, ಮದರ್ ಥೆರೇಸಾ, ಸುಭಾಸ್ ಚಂದ್ರ ಬೋಸ್ ನಾನು ಕಂಡದ್ದು ಸುಳ್ಳಲ್ಲ. ಇವರೆಲ್ಲರ ಸಮ್ಮಿಲನ ಅವಳಿದ್ದಂತೆ ಎಂದು ನನಗೆ ಅಗಾಗ ಅನಿಸುವುದುಂಟು. ಅವಳ ದೃಷ್ಟಿ, ಮತ್ತು ದೂರಾಲೋಚನೆಗಳು ನಮ್ಮಲನೇಕರಿಗೆ ಬರಲು ಸಾಧ್ಯವಿಲ್ಲೆವೇನೋ. ಬಂದಿದ್ದರೆ ಸ್ಥಿತಿ ಹೀಗಿರುತ್ತಿರಲಿಲ್ಲ. ಇರಲಿ ನಾನೇ ಪುಣ್ಯವಂತ ಎಂದು ನನ್ನ ಮನ ಆಗಾಗ ಗುನುಗುವುದು. ನನ್ನನ್ನು ನಾನು ಅದಕ್ಕಿಂತ ಹೆಚ್ಚು ಹೇಗೆ ಕರೆದುಕೊಳ್ಳಲಿ..?
ಇನ್ನು ಮುಂದೆ ಹೇಳುವುದಾದರೆ ಎಲ್ಲ ಹೆಣ್ಣಿನಂತೆ ಅವಳಿಗೂ ಒಂಚೂರು ನಾಚಿಕೆ,ಲಜ್ಜೆ ಇತ್ಯಾದಿ ಆಗಾಗ ಬರುವುದುಂಟು. ಅವಳೊಬ್ಬ ಪಾಕಪ್ರವೀಣೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವಳ ಕೈರುಚಿ ನನ್ನ ನಾಲಗೆಯನ್ನು ಚಪ್ಪರಿಸಿಕೊಂಡೇ ಇರುವಂತೆ ಮಾಡುತ್ತದೆ. ನಳನ ನಂತರ ಅವಳೇನೋ ಎಂಬಂತೆ ಅವಳ ಅಡುಗೆ. ದಿನವೂ ಅಲ್ಲದಿದ್ದರೂ ಹಲವು ಬಾರಿ ಆ ರುಚಿ ನೋಡುವ ಭಾಗ್ಯ ನನಗೆ ದೊರೆತಿದೆ.
  ಏನೇ ಆದರೂ ಅವಳೊಂದಿಗೆ ಕಳೆದ ಎಲ್ಲ ಕ್ಷಣಗಳೂ ಮಧುರ ಮತ್ತು ಮನ ಮೋಹಕ. ಇನ್ನು ಮುಂದೆಯೂ ಅಂಥ ಕ್ಷಣಗಳಿಗಾಗಿ ನನ್ನ ಮನ ಹಾತೊರೆಯುವುದು ಅಷ್ಟೇ ಸತ್ಯ. ನನ್ನ ಬಾಳಿನ ಬೆಳಕು, ದೀಪ, ಇನ್ನೂ ಏನೇನೋ ಕವಿಗಳಂತೆ ಹೇಳಲು ನನಗೆ ಬಾರದು. ನನ್ನ ಜೀವನಕ್ಕೆ ಜೀವ ತುಂಬಿದವಳು ಅವಳು, ಅಷ್ಟು ಮಾತ್ರ ನನ್ನಿಂದ ಹೇಳಲು ಸಾಧ್ಯ.  ಅವಳ ಮಾತುಗಳೇ ನನಗೆ ಚೈತನ್ಯ,ಹುರುಪು. ಅವಳೊಂದಿಗೆ ನನ್ನ ಇಡೀ ಬದುಕನ್ನು ಸಾಗಿಸುವ ಮಹದಾಸೆಯನ್ನು ನಾನು ಹೊತ್ತುಕೊಂಡಿರುವೆ.

No comments:

Post a Comment